ಮಂಗಳವಾರ, ಜನವರಿ 3, 2012

"ಮುಂಜಾವಿನ ತಿಳಿಗನಸು"


ಮುಂಜಾವಿನ ಅಭಿಷೇಕಕೆ ಪುಟಿದೆದ್ದಿದೆ ಮನಸು
ಕುಣಿದಾಡುವ ಹೃದಯದಲ್ಲಿ ಮುದ ನೀಡಿದೆ ಕನಸು
ಮುಂಜಾವಿನ ಆ ಮಂಜಿಗೆ ಮುತ್ತಿಕ್ಕಿವೆ ಕಿರಣ
ತಿಳಿಹಾಸಿನ ಹಸಿರಿನಲ್ಲಿ ನಾ ಇಟ್ಟೆನು ಚರಣ//


ಹಸಿರಾದ ಧರಿತ್ರಿಗೆ ಆಕಾಶದ ಹೊದಿಕೆ
ಗಿರಿಶೃಂಗದ ಸಾಲು ನೀಡುತ್ತಿವೆ ನೆರಿಗೆ//


ಮಸುಕಾದ ನಸುಕಿನಲ್ಲಿ ಹೊಳೆಯುತ್ತಿದೆ ಅಂಬರ
ಕಿರಣಗಳ ಸ್ಪರ್ಶದಲ್ಲಿ ಮೊಗ್ಗರಳಿದೆ ಮಲ್ಲಿಗೆ
ಮಕರಂದವ ಹೀರಲು ಝೇ೦ಕರಿಸಿದೆ ದುಂಬಿ
ನಿಶ್ಯಬ್ದದ ನಿಸರ್ಗಕೆ ಸ್ವರನೀಡಿದೆ ಖಗಸಾಲು//


ಹುಲುಹಾಸಿನ ಹಾಸಿಗೆಯಲಿ ಹಾರುತ್ತಿವೆ ಹಿರಣ
ಕಂಗೊಳಿಸುವ ಹರಿತ್ತಿಗೆ ಗರಿಬಿಚ್ಚಿದೆ ಮಯೂರ 
ತಿಳಿಯಾದ ನೀರಿನಲ್ಲಿ ಕಂಗೊಳಿಸಿದೆ ಕಮಲ
ಅವುಗಳ ನಡುವಲಿ ಈಜುತ್ತಿವೆ ಮೀನು//


ಈ ಇಬ್ಬನಿಯ ನಡುವೆ ಸುರಿಯುತ್ತಿದೆ ಹನಿಮಳೆ
ಬಡಿದಪ್ಪಿ ಸುರಿಮಳೆಯು ಬಿತ್ತರಿಸಿದೆ ರಂಗೋಲಿಯ ಚಿತ್ತಾರ
ಪ್ರಕೃತಿಯ ಆಹ್ಲಾದವ ಸವಿಯುತ್ತಿದೆ ಜೇನು//


ಕಣ್ತೆರೆದು ಎದ್ದೇಳು ಮನಬಿಚ್ಚಿ ಆನಂದಿಸು
ಪ್ರಕೃತಿಯ ಮಡಿಲಲ್ಲಿ ಸುಖದಿ ನೀ ನಿದ್ರಿಸು
ನಿಸರ್ಗದ ತೊಟ್ಟಿಲಲಿ ಗೋಚರಿಸಲಿ ತಿಳಿಗನಸು
ಈ ಸೊಬಗಿನ ವರ್ಷಧಾರೆ-ಪುಳಕಿಸಲಿ ಮೈ- ಮನಸು//
                                                                       - "ಶ್ರೀ"

"ಬಾಲ್ಯ"


ಬಾಲ್ಯ! ಅಪ್ರತಿಮ ಅದರ ಚಿತ್ರಣ
ಶುಭ್ರ, ಮುಗ್ಧ ಕೋಮಲ ಪ್ರಾಣ


ಹಾರುವೆವು ಸ್ವಚ್ಛಂದ ಹಕ್ಕಿಯಂತೆ ರೆಕ್ಕೆ ಬಿಚ್ಚಿ 
ಕಂಡಿದ್ದನ್ನ, ಕೇಳಿದ್ದನ್ನ ಹೇಳುವೆವು
                         ಮುಚ್ಚುಮರೆಯಿಲ್ಲದೆ ಮನ ಬಿಚ್ಚಿ


ನಮಗಾರು ಸಾಟಿ ಆ ದಿನಗಳಲಿ?
ನಮಗೆ ನಾವೇ ಸಾಟಿ ಜೀವನ ರಣರಂಗದಲಿ
ಬೀಳುವೆವು, ಜಾರುವೆವು, ಅನೇಕ ನೋವುಗಳ ಎದುರಿಸುವೆವು
ಬಿದ್ದು, ಎದ್ದು, ನೋವುಗಳ ಮರೆತು
                      ಗೆಲುವಿನ ಊಟವ ಉಣುವೆವು...


ಲೋಕದ ಜಂಜಾಟಗಳ ಅರಿಯೆವು
ಮೋಸ, ಕಪಟ, ವಂಚನೆಗಳ ತಿಳಿಯೆವು
ಬದುಕಿನ ಸಂಕೋಲೆಯಿಂದ ಮುಕ್ತರು ನಾವು
ಎಲ್ಲದರಿಂದ ಸ್ವತಂತ್ರರು ನಾವು, ಎಲ್ಲರಿಂದ ಸ್ವತಂತ್ರರು


ಬೇಡಿದೆನು ನಾ ದೇವರಲಿ
ಕಸಿಯಬೇಡ ಬಾಲ್ಯವನು
ಚಿರವಾಗಿಸು ನನ್ನ ಸ್ವರ್ಣಮಯ ಲೋಕವನು


ಆದರೆ ಕಾಲಚಕ್ರವ ತಡೆವರು ಯಾರು?
ಗಡಿಯಾರದ ಮುಳ್ಳ ನಿಲಿಸುವರು ಯಾರು?
ಬದುಕಲೆಲ್ಲವೂ ನಶ್ವರ, ಕ್ಷಣಿಕ
ಹುಟ್ಟಿದ ಮೇಲೆ ಕಾಣಲೇಬೇಕು ಬಾಲ್ಯ
ಯೌವನ ಮುಪ್ಪನು ಸಾಯುವ ತನಕ
ಅನುಭವಿಸಬೇಕು ಸಂತಸದಿಂದ ಜೀವವಿರುವ ತನಕ...


                                                                      -"ಶ್ರೀ" 

ಗುರುವಾರ, ಡಿಸೆಂಬರ್ 22, 2011

"ಜಲ ವಿಸ್ಮಯ"


ಹೇಗೆ ಬಣ್ಣಿಸಲಿ ನಾ ಆ ಜಲಧಾರೆಯ ಪರಿ
ಹೇಗೆ ಚಿತ್ರಿಸಲಿ ನಾ ಆ ಧುಮ್ಮಿಕ್ಕುವ ಝರಿ 
ಎಲ್ಲವೂ ಪ್ರಕೃತಿಯ ಅಚ್ಚರಿ//


ಧುಮ್ಮಿಕ್ಕುವ ಜಲಧಾರೆಯ ಕಂಡು ಕಣ್ ಮನ ಮಿಡಿದಿದೆ 
ಅಲೆ ಅಲೆಯಾಗಿ ದಡವನ್ನು ಬಡಿವ ಸದ್ದು ಮನವನ್ನು ಕದಡಿದೆ
ಮಂದವಾಗಿ ಬೀಸುವ ತಂಗಾಳಿಯ ಆ ಸ್ಪರ್ಶ ಮೈನವಿರೆಳಿಸಿದೆ
ಇದ ಕಂಡು ಕಣ್ ಗಳ ಹರಿಸಿದ ನನಗೆ
ನಭೋ ಮಂಡಲವೇ ಕಲೆಗಾರನ ಸುಂದರ ಕಲೆಯಂತೆ 
                                       ಕಣ್ಣಲಿ ಅಚ್ಚಳಿದಿದೆ
ಒಟ್ಟಿನಲಿ ತನು ಮನ ಆಹ್ಲಾದದಿ ಮಿಂದೆದ್ದಿದೆ
ಮಿಡಿದಿದೆ, ಕದಡಿದೆ, ಮೈಮನ ತಣಿದಿದೆ 
                                       ಒಳ ಮನಸನು ಹುಚ್ಚೆಬ್ಬಿಸಿದೆ


ಜೀವರಾಶಿಗೆ ಜಲ ಉಸಿರು 
ಜಲವಿದ್ದರೆ ತಾನೇ ಎಲ್ಲಿಯೂ ಹಸಿರು..
ಆದರೆ ನನಗದು ಹಸಿರು, ಉಸಿರು, ಮನದಾಳದ ಕಲ್ಪತರು


ಉನ್ಮಾದದಲಿ ಹೇಳುವುದಾದರೆ 
ಕವಿಗೆ ಅದು ಕವಿತೆ, ಕವಿ ಸಾಲುಗಳ ಒರತೆ
ವೇದಾಂತಿಗೆ ಅದು ಚರಿತೆ, ಸಾಮಾನ್ಯಗೆ ಅದು ವಿಸ್ಮಯ
ರಸಿಕಂಗೆ ಅದೇ ಪ್ರಾಣ, ತ್ರಾಣ, ಜಗ ಸ್ವರ್ಗ
ಉತ್ಪ್ರೇಕ್ಷೆ ಆಗದಿದ್ದರೆ ಅದರಲ್ಲೇ ಆತ ಉನ್ಮತ್ತ....

"ಸುಂದರ ಕನಸು"


ನಿನ್ನ ಆ ಕೆಂದಾವರೆಯಂತಹ ಮೊಗವು 
ಮುಸುಕು ಮಾಡಿತು ನನ್ನೆಲ್ಲಾ ಭಾವನೆಗಳನು 
ನಿನ್ನ ಸೌಂದರ್ಯದ ಮೋಹದ ಪಾಶವು 
ಅರಳಿಸಿತು ನನ್ನಲಿ ಅನುರಾಗದ ಅಲೆಗಳನು 
ಅಂದು ನೀ ನಕ್ಕಾಗ ಚಂದ್ರನ ಮೊಗವು 
                                   ಬಾಡಿತ್ತು ಅಸೂಯೆಯಿಂದ 
ಆ ಮಾದಕ ನಗುವಿನ ಸಂಕೋಲೆ
ಬಂಧಿಯಾಗಿಸಿತು ನನ್ನ ಹೃದಯವನು ಪ್ರೀತಿಯಿಂದ//


ನಿನ್ನ ಬಳುಕುವ ಬಳ್ಳಿಯಂತಹ ದೇಹದ ಹೋಲಿಕೆ
ಏನೂ ಅಲ್ಲ ಆ ಬೇಲೂರ ಶಿಲಾ ಬಾಲಿಕೆ!!
ನಿನ್ನಲಿ ನಾ ಕಂಡೆ ಚುರುಕುತನ ಲವ ಲವಿಕೆ 
ಮೊದಲ ನೋಟಕ್ಕೇ ನನ್ನ ಮನಸಿಗಾಯ್ತು ಲವ್- ಲವಿಕೆ..//


ನಾನೋ! ನೀನೆಸೆದ ನಗುವಿನ ಗಾಳಕ್ಕೆ ಸಿಕ್ಕ ಮೀನಂತಾಗಿದ್ದೆ
ಪ್ರೇಮ ಸಾಗರದಲಿ ಮುಳುಗಿ ವಿಲವಿಲನೆ ಒದ್ದಾಡುತಿದ್ದೆ...
ಇನ್ನೇನು ನಿನಗೆ ನನ್ನ ಪ್ರೀತಿಯ ವಿಷಯ  ಹೇಳುವನಿದ್ದೆ 
ಕಣ್ತೆರೆದು, ಬಾಯ್ಬಿಟ್ಟು ಹೇಳುವೆನೆಂದು ಕೊಂಡಾಗ
                                            ನಿದ್ದೆಯಿಂದ ನಾನೆದ್ದೆ...
ಸುಂದರ ಕನಸಿಗೆ ಎಳ್ಳು ನೀರು ಬಿಟ್ಟಿದ್ದೆ...// 

ಮಂಗಳವಾರ, ಡಿಸೆಂಬರ್ 6, 2011

"ಅಗೋಚರ ಆತ್ಮ"

ಅಗೋಚರ ಆತ್ಮದ ಬಗೆಗೆ ಹೀಗೊಂದು ವಿಶ್ಲೇಷ....

ಬೀಸುವ ಗಾಳಿಯ ಹರಿಯುವ ನೀರಿನ
                              ವಾತಾವರಣವು ನೀನಾದೆ//
ಕೊರೆಯುವ ಚಳಿಯಲಿ ಇಬ್ಬನಿ ಮಸುಕಲಿ
                              ಹೊಂಗಿರಣವು ನೀನಾದೆ//
ತುಂತುರು ಮಳೆಯಲಿ ದಿನಕರನಡಿಯಲಿ
                              ಕಾಮನಬಿಲ್ಲು ನೀನಾದೆ//
ಹರಗಿದ ಇಳೆಯಲಿ ಪ್ರಕೃತಿಯ ಮಡಿಲಲಿ
                              ಹಸಿರಿನ ತೆನೆಯು ನೀನಾದೆ//
ಹಸಿರಿನ ಧರೆಯಲಿ ಗಿರಿಗಳ ನಡುವಲಿ
                              ಸುಜಲಧಾರೆಯು ನೀನಾದೆ//
ಅನನ್ಯ ವನಸಿರಿಯ ಕಸ್ತೂರಿ ಮೃಗದ
                              ಸೂಸುವ ಕಂಪು ನೀನಾದೆ//
ಅನಂತ ಆಗಸದ ಮೋಡದ ಮರೆಯಲಿ
                              ಚಿನ್ಮಯ ಚೇತನ ನೀನಾದೆ//
ಬಿತ್ತರ ಲೋಕದ ರವಿ ಮಂಡಲದ 
                              ಚಿರಂತನ ಮೂರ್ತಿಯು ನೀನಾದೆ//
ಪಂಚಭೂತದ ಆಸ್ತಿ ಪಂಜರದಲಿ
                              ಅಗೋಚರ ಆತ್ಮ ನೀನಾದೆ//

"ಕನ್ನಡ! ಕನ್ನಡ! ಕನ್ನಡ!"


ಕನ್ನಡ - ಕರುನಾಡ ಹಿರಿಮೆಯ ಬಗ್ಗೆ ಎಷ್ಟು ಬಣ್ಣಿಸಿದರೂ ಸಾಲದು....


 ಕನ್ನಡ! ಕನ್ನಡ! ಕನ್ನಡ!
ಕಲಿಗಳ ನಾಡು ಕನ್ನಡ
ನಲಿವಿನ ಬೀಡು ಕನ್ನಡ
ಗಿರಿಗಳ ತೋಪು ಕನ್ನಡ
ಕೋಟೆಯ ವರ್ಮ ಕನ್ನಡ
ನದಿಗಳ ಕಣಜ ಕನ್ನಡ
ಹೊನ್ನಿನ ಖನಿಯು ಕನ್ನಡ
ಸುಂದರ ಭಾಷೆಯು ಕನ್ನಡ
ಅತಿ ಸುಂದರ ಭಾಷೆಯು ಕನ್ನಡ//
                                           ಶ್ರೀಗಂಧದ ಸಿರಿಯು ಕನ್ನಡ
                                           ವಿಪಿನದ ಹಂದರ ಕನ್ನಡ
                                           ಮಾವಿನ ತೋರಣ ಕನ್ನಡ
                                           ಮಲ್ಲಿಗೆ ಕಂಪಿನ ಕನ್ನಡ
                                           ತ್ಯಾಗದ ತೇಗದ ಕನ್ನಡ
                                           ಚಂದನ ವೃಷ್ಟಿಯ ಕನ್ನಡ
                                           ಹೆಮ್ಮೆಯ ಧಾತ್ರಿ ಕನ್ನಡ
                                           ನಮ್ಮೆಲ್ಲರ ಹೆಮ್ಮೆಯ ಧಾತ್ರಿ ಕನ್ನಡ//
ಕವಿಗಳ ನೆಲೆಯು ಕನ್ನಡ
ಜ್ಞಾನದ ಪುಷ್ಕರ ಕನ್ನಡ
ರಾಜರ ರಾಜ್ಯ ಕನ್ನಡ
ಅರಮನೆ ಮಾಡು ಕನ್ನಡ
ಚಿಂತನ-ಮಂಥನ ಕನ್ನಡ
ತಂತ್ರಜ್ಞರ ಸೆಲೆಯು ಕನ್ನಡ
ಪ್ರಜ್ವಲ ರಾಜ್ಯ ಕನ್ನಡ
ಭರತ ದೇಶದ ಪ್ರಜ್ವಲ ರಾಜ್ಯ ಕನ್ನಡ//
                                                      ಎಲ್ಲರ ಪ್ರೀತಿ ಕನ್ನಡ
                                                      ಪ್ರೇಮ ವತ್ಸಲ ಕನ್ನಡ
                                                      ಮಮತೆಯ ವನಜ ಕನ್ನಡ
                                                      ಸುಹಾಸಿನಿಯು ಕನ್ನಡ
                                                      ನವರಸ ಬಿಂದಿಗೆ ಕನ್ನಡ
                                                      ಅಪಾರ ಖ್ಯಾತಿಯ ಕನ್ನಡ
                                                      ಅಮರ ಜ್ಯೋತಿಯು ಕನ್ನಡ
                                                      ಮಂದಾರ ಪುಷ್ಪವು ಕನ್ನಡ
                                                      ಹೃದಯವಂತರ ನೀಡು ಕನ್ನಡ
                                                      ಸ ಹೃದಯವಂತರ ನೀ ನೀಡು ಕನ್ನಡ//

ಸೋಮವಾರ, ನವೆಂಬರ್ 21, 2011

"ಸಗ್ಗದ ಬದುಕು"



ನನ್ನ ಬ್ಲಾಗಿಂಗ್ ಪಯಣವನ್ನು ಈ ಕವನದೊಂದಿಗೆ ಶುರು ಮಾಡುತ್ತಿದ್ದೇನೆ: 

ಬದುಕೆಂಬ ಮೂರಕ್ಷರ ಅತಿ ಸುಂದರ ಅತಿ ಮಧುರ
ಜೀವ ಭಾವಗಳ ಸುಖ ಸಾಗರ ಸಂಬಂಧಗಳ ಸೇತು
ಭಾವನೆಗಳ ಕಡಲು ಅಲೆಯಾಗಿ ಹರಿಯುವುದಿಲ್ಲಿ
ನೀಡುವುದು ಮನಕೆ ಪ್ರಶಾಂತತೆ ಒಂಥರಾ ನಿರ್ಲಿಪ್ತತೆ //


ಮೂರಕ್ಷರದ ನಾಲ್ಕು ದಿನಗಳ ಈ ಬದುಕು 
ಕಲಿಸುವುದು ದಿನಂಪ್ರತಿ ಹೊಸ ಹೊಸ ವಿಷಯ 
ನೀಡುವುದು ಬಾಳಿನ ಪಥಕೆ ಹೊಸ ರೂಪ 
ಅದರ ಸೊಗಡು ಸಂಭ್ರಮ, ಬೆಳದಿಂಗಳ ಚುಕ್ಕಿ-ಚಂದ್ರಮ //


ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸೇರುವ ನಾವು
ಗಳಿಸುವೆವು-ಕಳೆಯುವೆವು ಹಣ, ಸ್ಥಾನ, ಮಾನ
ಸಂಭಂದಗಳಿಗೆ ಬೆಲೆ ಕಟ್ಟಲಾದೀತೆ?
ಬೆರೆವೆವು - ಸೇರುವೆವು ನೂರೆಂಟು ಜನರ ಒಡಗೂಡಿ 
ಬಿಡಿಸಲಾದೀತೇ ಸಂಭಂದಗಳ ಬಂಧವ - ಕೊಂಡಿಯ?
ಮರೆಯಲಾದೀತೆ ಕಳೆವ ಮಧುರ ಕ್ಷಣಗಳ ಚಂದವ?//


ಎಲ್ಲರೂ ನೀಡುವರು ಬದುಕಿಗೆ ವಿಧ ವಿಧದ ಅರ್ಥ 
ಬದುಕು ಬರಿದಾಗಿ ಹೋಗುವುದು ಸಿಗದಿದ್ದರೆ ಅದಕೆ ಪರಿಪೂರ್ಣ ಅರ್ಥ
ಬದುಕ ಬದುಕಾಗಿ ಬದುಕಿದರೆ ಸಗ್ಗವಾಗುವುದು ಬದುಕು //