ಮಂಗಳವಾರ, ಜನವರಿ 3, 2012

"ಮುಂಜಾವಿನ ತಿಳಿಗನಸು"


ಮುಂಜಾವಿನ ಅಭಿಷೇಕಕೆ ಪುಟಿದೆದ್ದಿದೆ ಮನಸು
ಕುಣಿದಾಡುವ ಹೃದಯದಲ್ಲಿ ಮುದ ನೀಡಿದೆ ಕನಸು
ಮುಂಜಾವಿನ ಆ ಮಂಜಿಗೆ ಮುತ್ತಿಕ್ಕಿವೆ ಕಿರಣ
ತಿಳಿಹಾಸಿನ ಹಸಿರಿನಲ್ಲಿ ನಾ ಇಟ್ಟೆನು ಚರಣ//


ಹಸಿರಾದ ಧರಿತ್ರಿಗೆ ಆಕಾಶದ ಹೊದಿಕೆ
ಗಿರಿಶೃಂಗದ ಸಾಲು ನೀಡುತ್ತಿವೆ ನೆರಿಗೆ//


ಮಸುಕಾದ ನಸುಕಿನಲ್ಲಿ ಹೊಳೆಯುತ್ತಿದೆ ಅಂಬರ
ಕಿರಣಗಳ ಸ್ಪರ್ಶದಲ್ಲಿ ಮೊಗ್ಗರಳಿದೆ ಮಲ್ಲಿಗೆ
ಮಕರಂದವ ಹೀರಲು ಝೇ೦ಕರಿಸಿದೆ ದುಂಬಿ
ನಿಶ್ಯಬ್ದದ ನಿಸರ್ಗಕೆ ಸ್ವರನೀಡಿದೆ ಖಗಸಾಲು//


ಹುಲುಹಾಸಿನ ಹಾಸಿಗೆಯಲಿ ಹಾರುತ್ತಿವೆ ಹಿರಣ
ಕಂಗೊಳಿಸುವ ಹರಿತ್ತಿಗೆ ಗರಿಬಿಚ್ಚಿದೆ ಮಯೂರ 
ತಿಳಿಯಾದ ನೀರಿನಲ್ಲಿ ಕಂಗೊಳಿಸಿದೆ ಕಮಲ
ಅವುಗಳ ನಡುವಲಿ ಈಜುತ್ತಿವೆ ಮೀನು//


ಈ ಇಬ್ಬನಿಯ ನಡುವೆ ಸುರಿಯುತ್ತಿದೆ ಹನಿಮಳೆ
ಬಡಿದಪ್ಪಿ ಸುರಿಮಳೆಯು ಬಿತ್ತರಿಸಿದೆ ರಂಗೋಲಿಯ ಚಿತ್ತಾರ
ಪ್ರಕೃತಿಯ ಆಹ್ಲಾದವ ಸವಿಯುತ್ತಿದೆ ಜೇನು//


ಕಣ್ತೆರೆದು ಎದ್ದೇಳು ಮನಬಿಚ್ಚಿ ಆನಂದಿಸು
ಪ್ರಕೃತಿಯ ಮಡಿಲಲ್ಲಿ ಸುಖದಿ ನೀ ನಿದ್ರಿಸು
ನಿಸರ್ಗದ ತೊಟ್ಟಿಲಲಿ ಗೋಚರಿಸಲಿ ತಿಳಿಗನಸು
ಈ ಸೊಬಗಿನ ವರ್ಷಧಾರೆ-ಪುಳಕಿಸಲಿ ಮೈ- ಮನಸು//
                                                                       - "ಶ್ರೀ"

"ಬಾಲ್ಯ"


ಬಾಲ್ಯ! ಅಪ್ರತಿಮ ಅದರ ಚಿತ್ರಣ
ಶುಭ್ರ, ಮುಗ್ಧ ಕೋಮಲ ಪ್ರಾಣ


ಹಾರುವೆವು ಸ್ವಚ್ಛಂದ ಹಕ್ಕಿಯಂತೆ ರೆಕ್ಕೆ ಬಿಚ್ಚಿ 
ಕಂಡಿದ್ದನ್ನ, ಕೇಳಿದ್ದನ್ನ ಹೇಳುವೆವು
                         ಮುಚ್ಚುಮರೆಯಿಲ್ಲದೆ ಮನ ಬಿಚ್ಚಿ


ನಮಗಾರು ಸಾಟಿ ಆ ದಿನಗಳಲಿ?
ನಮಗೆ ನಾವೇ ಸಾಟಿ ಜೀವನ ರಣರಂಗದಲಿ
ಬೀಳುವೆವು, ಜಾರುವೆವು, ಅನೇಕ ನೋವುಗಳ ಎದುರಿಸುವೆವು
ಬಿದ್ದು, ಎದ್ದು, ನೋವುಗಳ ಮರೆತು
                      ಗೆಲುವಿನ ಊಟವ ಉಣುವೆವು...


ಲೋಕದ ಜಂಜಾಟಗಳ ಅರಿಯೆವು
ಮೋಸ, ಕಪಟ, ವಂಚನೆಗಳ ತಿಳಿಯೆವು
ಬದುಕಿನ ಸಂಕೋಲೆಯಿಂದ ಮುಕ್ತರು ನಾವು
ಎಲ್ಲದರಿಂದ ಸ್ವತಂತ್ರರು ನಾವು, ಎಲ್ಲರಿಂದ ಸ್ವತಂತ್ರರು


ಬೇಡಿದೆನು ನಾ ದೇವರಲಿ
ಕಸಿಯಬೇಡ ಬಾಲ್ಯವನು
ಚಿರವಾಗಿಸು ನನ್ನ ಸ್ವರ್ಣಮಯ ಲೋಕವನು


ಆದರೆ ಕಾಲಚಕ್ರವ ತಡೆವರು ಯಾರು?
ಗಡಿಯಾರದ ಮುಳ್ಳ ನಿಲಿಸುವರು ಯಾರು?
ಬದುಕಲೆಲ್ಲವೂ ನಶ್ವರ, ಕ್ಷಣಿಕ
ಹುಟ್ಟಿದ ಮೇಲೆ ಕಾಣಲೇಬೇಕು ಬಾಲ್ಯ
ಯೌವನ ಮುಪ್ಪನು ಸಾಯುವ ತನಕ
ಅನುಭವಿಸಬೇಕು ಸಂತಸದಿಂದ ಜೀವವಿರುವ ತನಕ...


                                                                      -"ಶ್ರೀ"